Sunday, July 11, 2010

ಸಂತೃಪ್ತಿ (ಕತೆ)

ಸಂತೃಪ್ತಿ (ಸಣ್ಣ ಕತೆ)
- ವಿದ್ಯಾಶಂಕರ ಹರಪನಹಳ್ಳಿ


ಒಂದು ಉರಿನಲ್ಲಿ ಒಬ್ಬ ಯುವಕನಿದ್ದ ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು. ಎಷ್ಟು ತಿಂದರೂ ತೃಪ್ತಿ ಇಲ್ಲ, ತಳವಿಲ್ಲದ ಬಾವಿಯಂತಹ ಹೊಟ್ಟೆ, ಎಷ್ಟು ತಿಂದರೂ ಇಂಗದ ಹಸಿವು! ಮನೆ ಮದ್ದಾಯಿತು, ಅಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು, ಹಲವು ದೇವರಿಗೆ ಹರಕೆ ಹೊತ್ತರು. ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸಿವುದೇ ಒಂದು ಸಮಸ್ಯೆಯಾಯಿತು. ಕೊನೆಗೆ ಅವನ ತಂದೆ ತಾಯಿ, ಅವನ ಬಂಧು-ಬಳಗ ಎಲ್ಲಾ ಕೈ ಚೆಲ್ಲಿದರು!

ಈಗಿನ ಕಾಲದವರಂತಲ್ಲ, ಆಗಿನ ಕಾಲದ ಜನ. ಅವನ ಊರಿನವರು ಯುವಕನ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದರು. ಕೊನೆಕೊನೆಗೆ ಇದು ಊರಿನವರ ಸಮಸ್ಯೆಯಾಯಿತು. ಇಡಿ ಊರಿನಲ್ಲಿ ಆಹಾರದ ಕೊರತೆ ಕಂಡುಬಂತು. ಊರವರು ಅಸಮಧಾನ ಸೂಚಿಸುವ ಮೊದಲೇ ಅವನ ತಂದೆತಾಯಿ ಅವನನ್ನು ಊರಿಂದ ಹೊರಕಳಿಸುವ ವಿಚಾರ ಮಾಡಿದರು. ಎಲ್ಲೋ ದೂರದ ಆಶಾಭಾವನೆ ಮತ್ತು ಕರುಳಿನ ಸಂಕಟ ಇಷ್ಟು ದಿನ ಅವರನ್ನು ತಡೆಯುತಿತ್ತು. ಆದರೆ ಆಹಾರದ ಕೊರತೆ ಇಡೀ ಊರನ್ನೇ ವ್ಯಾಪಿಸಿದಾಗ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು.

ದೇವರ ದಯೆಯೋ ಅವರ ಪೂರ್ವ ಜನ್ಮದ ಪುಣ್ಯವೋ, ಸಮಯಕ್ಕೆ ಸರಿಯಾಗಿ ಆ ಊರಿಗೆ ಒಬ್ಬ ಸನ್ಯಾಸಿಯ ಅಗಮನವಾಯಿತು. ಅವರ ಸಾಧನೆ ಸಾರ್ಮಥ್ಯದ ಬಗ್ಗೆ, ಅವರಿಗಿರುವ ವಿಶೇಷ ಶಕ್ತಿ ಬಗ್ಗೆ ಅನೇಕ ದಂತಕತೆಗಳಿದ್ದವು. ಕೊನೆ ಪ್ರಯತ್ನವೆಂಬಂತೆ ಯುವಕನ ತಂದೆತಾಯಿ ಸನ್ಯಾಸಿಯ ಹತ್ತಿರ ಯುವಕನ ಸಮಸ್ಯೆಯನ್ನು ನಿವೇದಿಸಿದರು.

ಸಮಸ್ಯೆಯನ್ನು ಆಲಿಸಿದ ಸನ್ಯಾಸಿ ಸಾವಧಾನದಿಂದ ಹೀಗೆಂದರು: "ಚಿಂತಿಸಬೇಡಿ, ಪರಿಹಾರವಿದೆ! ಈ ಯುವಕ ಇನ್ನು ಜೀವನ ಪೂರ್ತಿ ಒಬ್ಬನೆ ಕುಳಿತು ತಿನ್ನುವ ಹಾಗಿಲ್ಲ. ಪ್ರತಿಸಾರಿ ಊಟಕ್ಕೆ ಕುಳಿತಾಗ ನಾಲ್ಕು ಜನರೊಂದಿಗೆ ಹಂಚಿ ತಿನ್ನಬೇಕು. ಈ ನಿಯಮ ತಪ್ಪಿಸಿದರೆ ಮತ್ತೆ ಅಗಾಧವಾದ ಹಸಿವಿನ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ."

ಸನ್ಯಾಸಿ ತೋರಿದ ಪರಿಹಾರದ ಬಗ್ಗೆ ಅನುಮಾನವಿದ್ದರೂ, ವಿಚಿತ್ರವೆನಿಸಿದರೂ, ಕೊನೆ ಪ್ರಯತ್ನವಾಗಿ ಅವರ ಸಲಹೆಯನ್ನು ಪಾಲಿಸಿದಾಗ ಆಶ್ಚರ್ಯವೆಂಬಂತೆ ಯುವಕನ ಅಗಾಧವಾದ ಹಸಿವಿನ ರೋಗ ಪರಿಹಾರವಾಯಿತು! ಯುವಕ ಸ್ವಲ್ಪ ತಿಂದರೂ ಸಂತೃಪ್ತಿಯನ್ನು ಅನುಭವಿಸಿದ.

ಊರಿನವರೆಲ್ಲ ಹರ್ಷದಿಂದ ಸನ್ಯಾಸಿಗೆ ಸನ್ಮಾನಿಸಿದರು. ಊರಿನವರಿಗೆಲ್ಲ ಆಶೀರ್ವಾದ ವಚನ ನೀಡುವಾಗ ಹೀಗೆ ಹೇಳಿದರು "ಅತಿ ಶ್ರೀಮಂತಿಕೆಯ ಅಥವಾ ಅತಿ ಹಣದಾಹವಿರುವವರು ಕೂಡ ಈ ಪರಿಹಾರವನ್ನು ಬಳಸಿ ಜೀವನದಲ್ಲಿ ಸಂತೃಪ್ತಿ ಹೊಂದಬಹುದು!"

ಆ ಹೊತ್ತಿಗೆ ಕಾರ್ಲ್ ಮಾಕ್ಸ್ ಇನ್ನೂ ಹುಟ್ಟಿರಲಿಲ್ಲ!!!

1 comment:

VidyaShankar Harapanahalli said...

Folks, This story was published in ThatsKannada.com Here is the link:

http://thatskannada.oneindia.in/literature/short-story/2010/0729-unquenchable-hunger-moral-story-vidyashankar.html